ಸಿದ್ದರಾಮಯ್ಯ ಅನ್ನೋದೊಂದು ಶಕ್ತಿ: ಬಸವರಾಜ್ ರಾಯರೆಡ್ಡಿ

 

ಸಿದ್ದರಾಮಯ್ಯ ಅನ್ನೋದೊಂದು ಶಕ್ತಿ: ಬಸವರಾಜ್ ರಾಯರೆಡ್ಡಿ

– ಬಿಜೆಪಿ ವಾಮ ಮಾರ್ಗದಿಂದ ಅಧಿಕಾರ ಹಿಡಿದಿದೆ
– ಸಿದ್ದರಾಮಯ್ಯ ಹಿಂದೂ ವಿರೋಧಿ ಅಲ್ಲ
– ಬೊಮ್ಮಾಯಿ ಅಧಿಕಾರ ಉಳಿಸಿಕೊಳ್ಳಲು ಮೌನ ಆಗಬಾರದು

ಬೆಂಗಳೂರು: ಸಿದ್ದರಾಮಯ್ಯ ಅನ್ನೋದು ಶಕ್ತಿಯಾಗಿದೆ. ಅವರ ಹಿಂದೆ ಲಕ್ಷಾಂತರ ಜನರು ಇದ್ದಾರೆ. ನಾವು ಹೈಕೋರ್ಟ್ ತೀರ್ಪನ್ನು ಗೌರವಿಸುತ್ತೇವೆ. ಆದರೆ ಹಿಜಬ್ ವಿಚಾರದಲ್ಲಿ ಸಿದ್ದರಾಮಯ್ಯ ಹೇಳಿಕೆಯನ್ನು ತಿರುಚಲಾಗಿದೆ ಎಂದು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಕೈ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಅಲ್ಲಿ ಮಾತನಾಡಿದ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ, ಬಿಜೆಪಿ ವಾಮ ಮಾರ್ಗದಿಂದ ಅಧಿಕಾರ ಹಿಡಿದಿದೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಕೂಡ ಅಭಿವೃದ್ಧಿಯಾಗಿಲ್ಲ. ಇವಾಗ ಬೊಮ್ಮಾಯಿ ಸಿಎಂ ಆಗಿದ್ದಾರೆ ಆದರೆ ಅಭಿವೃದ್ಧಿ ಕಾರ್ಯ ಯಾವುದು ಕಾಣುತ್ತಿಲ್ಲ. ಬಿಜೆಪಿ ಸರ್ಕಾರ ಗುತ್ತಿಗೆದಾರರಿಂದ ಶೇ.40 ಕಮಿಷನ್ ಪಡೆಯುತ್ತಿದೆ ಎಂದು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ ಎಂದು ಹೇಳಿದ್ದಾರೆ. 

ಹಿಜಬ್ ವಿಚಾರದಲ್ಲಿ ರಾಜಕೀಯ ನಡೆಯುತ್ತಿದೆ. ನಾವು ಹೈಕೋರ್ಟ್ ತೀರ್ಪನ್ನು ಗೌರವಿಸುತ್ತೇವೆ. ಹಿಜಬ್ ವಿಚಾರದಲ್ಲಿ ಸಿದ್ದರಾಮಯ್ಯ ಹೇಳಿಕೆಯನ್ನು ತಿರುಚಲಾಗಿದೆ. ವಿದ್ಯಾರ್ಥಿಗಳು ಸಮವಸ್ತ್ರದಲ್ಲಿಯೇ ಶಾಲೆಗೆ ಹೋಗಲಿ. ಆದರೆ ಮುಸ್ಲಿಂ ವಿದ್ಯಾರ್ಥಿಗಳಿಗೆ ಸಮವಸ್ತ್ರದ ಮೇಲೆ ದುಪ್ಪಟ್ಟ ಹಾಕಿಕೊಳ್ಳಲು ಅವಕಾಶ ಕೋಡಿ ಎಂದು ಹೇಳಿದ್ದಾರೆ ಅಷ್ಟೇ. ಮಠದ ಸ್ವಾಮೀಜಿಗಳು ತಲೆ ಮೇಲೆ ಕೂಡ ಶಾಲು ಹಾಕಿಕೊಳ್ಳುತ್ತಾರೆ ಎಂದು ಸಿದ್ದರಾಮಯ್ಯ ಹೇಳಿಲ್ಲ. ಸಿದ್ದರಾಮಯ್ಯ ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ, ಯಾರೋ ಒಬ್ಬ ಯುವಕ ಹಿಂದೆ ನಿಂತು ಸರ್, ಸ್ವಾಮಿಜಿಗಳು ಕೂಡ ತಲೆ ಮೇಲೆ ಶಾಲು ಹಾಕಿಕೊಳ್ತಾರೆ ಎಂದು ಹೇಳಿದ್ದಾರೆ. ಆಗ ಸಿದ್ದರಾಮಯ್ಯ ಹೌದು ಎಂದಿದ್ದಾರೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.

ಉತ್ತರಕರ್ನಾಟಕ ಭಾಗದಲ್ಲಿ ಹೆಂಗಸರು ತಲೆ ಮೇಲೆ ಸೆರಗು ಹಾಕುತ್ತಾರೆ. ಅದು ನಮ್ಮ ಸಂಸ್ಕೃತಿಯ ಭಾಗವಾಗಿದೆ. ಸ್ವಾಮೀಜಿಗಳ ಬಗ್ಗೆ ಸಿದ್ದರಾಮಯ್ಯ ಅವಹೇಳನ ಮಾಡಿಲ್ಲ. ಧರ್ಮ ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಅವರನ್ನು ನೈತಿಕವಾಗಿ ಕುಗ್ಗಿಸುವ ಕೆಲಸ ಬಿಜೆಪಿಯಿಂದ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಅವರನ್ನು ಕುಗ್ಗಿಸಿದರೆ ಕಾಂಗ್ರೆಸ್‍ಗೆ ನಷ್ಟ ಮಾಡುವ ಲೆಕ್ಕಾಚಾರವಾಗಿದೆ. ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿ ಬಿಜೆಪಿಯವರು ಇದ್ದಾರೆ. ಇಂತಹ ಚಿಲ್ಲರೆ ಕೆಲಸ ಬಿಜೆಪಿಯವರು ಮಾಡಬಾರದು ಎಂದು ವಾಗ್ದಾಳಿ ಮಾಡಿದ್ದಾರೆ.

ಪಡಿತರ ವ್ಯವಸ್ಥೆ ಎಲ್ಲಾ ಸಮುದಾಯಕ್ಕೆ ಸಿಗಬೇಕು ಎಂದು ಕಾರ್ಯಕ್ರಮ ತಂದವರು. ಬಸವಣ್ಣನ ಫೋಟೋ ಹಾಕಿದವರು, ಅಕ್ಕಮಹಾದೇವಿ ಹೆಸರು ಬಿಜಾಪುರ ಮಹಿಳಾ ವಿವಿಗೆ ಇಟ್ಟಿದ್ದು ಸಿದ್ದರಾಮಯ್ಯ. ಆದರೆ ಇವರ ಬಗ್ಗೆ ಕೆಲ ಸಚಿವರು ನೀಡುತ್ತಿರುವ ಹೇಳಿಕೆ ವಿಷಾದನೀಯವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಉಳಿಸಿಕೊಳ್ಳಲು ಮೌನ ಆಗಬಾರದು. ಸಚಿವರಿಗೆ ಕೀಳು ಮಟ್ಟದ ಹೇಳಿಕೆ ನೀಡದಂತೆ ತಾಕೀತು ಮಾಡಬೇಕು ಎಂದು ಹೇಳಿದ್ದಾರೆ.

ಸ್ವಾಮಿಜಿಗಳ ವಿರುದ್ಧ ಸಿದ್ದರಾಮಯ್ಯ ಮಾತಾಡಿಲ್ಲ. ಇವರು ಒಬ್ಬ ಸಮಾನ್ಯ ವ್ಯಕ್ತಿ ಅಲ್ಲ. ಸಿದ್ದರಾಮಯ್ಯ ಹಿಂದು ವಿರೋಧಿ ಅಲ್ಲ. ವೀರಶೈವ ಲಿಂಗಾಯತ ಸಮುದಾಯಕ್ಕಾಗಿ ಬಹಳಷ್ಟು ಕೆಲಸ ಮಾಡಿದ್ದಾರೆ. ಹಿಜಬ್ ವಿಚಾರದಲ್ಲಿ ಬಿಜೆಪಿ ನಾಯಕರು ಚಿಲ್ಲರೆ ಕೆಲಸ ಮಾಡುತ್ತಿದ್ದಾರೆ. ಚಿಲ್ಲರೆ ಅಧಿಕಾರಕ್ಕಾಗಿ ಚಿಲ್ಲರೆ ಅಧಿಕಾರಕ್ಕಾಗಿ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಬಸವರಾಜ ಬೊಮ್ಮಾಯಿ ಮೌನವಾಗಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಬೊಮ್ಮಾಯಿ ಅವರ ತಂದೆ ಎಸ್.ಆರ್.ಬೊಮ್ಮಾಯಿ ಗ್ರೇಟ್ ಪರ್ಸನ್. ಅವರ ಮಗ ಹೀಗೆ ನಡೆದುಕೊಳ್ಳುವುದು ಸತ್ತು ಸ್ವರ್ಗದಲ್ಲಿರುವ ಅವರ ಆತ್ಮಕ್ಕೆ ನೋವಾಗಿರಬಹುದು. ಅವರು ತಮ್ಮ ಸಚಿವರುಗಳಿಗೆ ಬುದ್ಧಿ ಹೇಳಬೇಕು ಎಂದು ಹರಿಹಾಯ್ದಿದ್ದಾರೆ.

Comments

Popular posts from this blog

ವಿಶ್ವದಲ್ಲೇ ದೆಹಲಿ ಅತ್ಯಂತ ಕಲುಷಿತ ರಾಜಧಾನಿ- ಜಗತ್ತಿನ ಟಾಪ್‌ 50ರಲ್ಲಿ ಭಾರತದ 35 ನಗರಗಳು

37 ವರ್ಷಗಳಲ್ಲೇ ಇದೇ ಮೊದಲು: ಉತ್ತರ ಪ್ರದೇಶದಲ್ಲಿ ದಾಖಲೆ ಬರೆದ ಬಿಜೆಪಿ, ಸತತ 2ನೇ ಬಾರಿಗೆ 'ಯೋಗಿ ಸರ್ಕಾರ'!!

ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲಾಗದ ಕೇಂದ್ರ ಸರ್ಕಾರವನ್ನು ವಜಾಗೊಳಿಸಲು ಮನವಿ.