ಟಿಪ್ಪುವಿನ ವೈಭವೀಕರಣ ಕೈಬಿಟ್ಟು, ಆತನ ಕ್ರೌರ್ಯದ ಬಗ್ಗೆ ಪಠ್ಯಪುಸ್ತಕದಲ್ಲಿ ಸೇರಿಸಿ: ಮುತಾಲಿಕ್
ಟಿಪ್ಪುವಿನ ವೈಭವೀಕರಣ ಕೈಬಿಟ್ಟು, ಆತನ ಕ್ರೌರ್ಯದ ಬಗ್ಗೆ ಪಠ್ಯಪುಸ್ತಕದಲ್ಲಿ ಸೇರಿಸಿ: ಮುತಾಲಿಕ್

ಬೆಂಗಳೂರು: ಪಠ್ಯದಲ್ಲಿ ಟಿಪ್ಪುವಿನ ವೈಭವೀಕರಣ ಕೈಬಿಡುವುದು ಮಾತ್ರವಲ್ಲದೇ, ಆತನ ಕ್ರೌರ್ಯದ ಬಗ್ಗೆ ಪಠ್ಯಪುಸ್ತಕದಲ್ಲಿ ಸೇರಿಸಿ ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಮೈಸೂರು ಹುಲಿ ಅಲ್ಲ, ಆತನ ಕ್ರೌರ್ಯದ ಬಗ್ಗೆ ದಾಖಲೆಯನ್ನು ನಾವು ಒದಗಿಸುತ್ತೇವೆ. ಟಿಪ್ಪು ಮಹಿಳೆಯರ ಮೇಲೆ ಮಾಡಿದ ಅತ್ಯಾಚಾರ, ಟಿಪ್ಪು ಮಾಡಿದ ದೇವಸ್ಥಾನ ದ್ವಂಸ ಹಾಗೂ ಟಿಪ್ಪುವಿನ ಮತಾಂತರ ನಡೆಯ ಬಗ್ಗೆ ಪಠ್ಯದಲ್ಲಿ ಹಾಕಬೇಕು. ಈ ಕುರಿತು ಸರ್ಕಾರಕ್ಕೆ, ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ದಾಖಲೆಯನ್ನು ನೀಡುತ್ತೇವೆ. ಈ ಹಿನ್ನೆಲೆಯಲ್ಲಿ ಟಿಪ್ಪುವಿನ ಕ್ರೌರ್ಯದ ಬಗ್ಗೆ ಪಠ್ಯಪುಸ್ತಕದಲ್ಲಿ ಸೇರಿಸಬೇಕು ಎಂದು ಮನವಿ ಮಾಡಿದರು.
ಧರ್ಮ ಯುದ್ಧ ಅಂತ್ಯಕ್ಕೆ 61 ಸಾಹಿತಿಗಳಿಂದ ಸಿಎಂಗೆ ಪತ್ರ ಬರೆದಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಹಿಂದೂಗಳ ಹತ್ಯೆ, ದೇವಾಲಯದ ಮೇಲೆ ದಾಳಿಯಾದಾಗ ಯಾರೂ ಧ್ವನಿ ಎತ್ತಿಲ್ಲ. ಹರ್ಷ ಕೊಲೆ ಆಯ್ತು, ದಲಿತ ಎಂಎಲ್ಎ ಮನೆಗೆ ಬೆಂಕಿ ಹಚ್ಚಿದರು. ಸ್ಟೇಷನ್ಗೆ ಬೆಂಕಿ ಹಚ್ಚಿದರು. ಆಗಲೂ ಧ್ವನಿ ಎತ್ತಿಲ್ಲ. ಆದರೆ ಈಗ ಧ್ವನಿ ಎತ್ತಿದ್ದಾರೆ. ಕೋರ್ಟ್ನ ತೀರ್ಪು ಬಂದಾಗ ಮುಸ್ಲಿಂ ಸಂಘಟನೆಗೆ ಪತ್ರ ಬರೆಯಬೇಕಿತ್ತು. ಆದರೆ ಆಗ ಮಾತನಾಡಿಲ್ಲ. ಇದೆಲ್ಲವನ್ನು ಗಮನಿಸಿದರೇ ಬುದ್ಧಿಜೀವಿಗಳು ಮುಸ್ಲಿಂ, ಕ್ರಿಶ್ಚಿಯನ್ ಏಜೆಂಟರಾಗಿದ್ದಾರೆ ಎಂದೆನಿಸುತ್ತದೆ ಎಂದು ಕಿಡಿಕಾರಿದರು.
ಪಠ್ಯದಲ್ಲಿ ಭಗವದ್ಗೀತೆ ಕೈಬಿಡುವ ಕುರಿತ ವಿಷಯಕ್ಕೆ ಸಂಬಂಧಿಸಿ ಅವರು, ಸಾವಿರಾರು ವರ್ಷದಿಂದ ಸಾಮರಸ್ಯದಿಂದ ನಡೆದುಕೊಂಡ ಬಂದ ದೇಶ ನಮ್ಮದಾಗಿದೆ. ಭಗವದ್ಗೀತೆಯಲ್ಲಿ ಮನುಷ್ಯ ಹೇಗೆ ಬದುಕುಬೇಕು ಎಂದು ಹೇಳಿದೆ. ಮಾನವೀಯತೆ ಅಂಶ ಹೇಳಿರುವ ಭಗವದ್ಗೀತೆ ಕಂಡರೆ ನಿಮಗೆ ಯಾಕೆ ಉರಿ. ನಮಗೆ ಸರ್ವಧರ್ಮದ ಪಾಠ ಹೇಳಬೇಡಿ. ಬೇರೆ ಧರ್ಮದವರಿಗೆ ಹೇಳಿ. ಸಂವಿಧಾನ ಕಲಿಸಿ. ಅದಕ್ಕೆ ವಿರೋಧವಿಲ್ಲ ಎಂದು ವಾಗ್ದಾಳಿ ನಡೆಸಿದರು.
Comments
Post a Comment