ಕನ್ನಡದ ಸಣ್ಣ ಬಜೆಟ್ ಚಿತ್ರಗಳಿಗೆ ಥಿಯೇಟರ್ ಇಲ್ಲ: ಆತಂಕದಲ್ಲಿ ನಿರ್ಮಾಪಕ
ಕನ್ನಡದ ಸಣ್ಣ ಬಜೆಟ್ ಚಿತ್ರಗಳಿಗೆ ಥಿಯೇಟರ್ ಇಲ್ಲ: ಆತಂಕದಲ್ಲಿ ನಿರ್ಮಾಪಕ

ಈ ತಿಂಗಳು ಭಾರೀ ಬಜೆಟ್ ಸಿನಿಮಾಗಳು ರಿಲೀಸ್ ಆಗಿವೆ. ಹಾಗಾಗಿ ಸಣ್ಣ ಬಜೆಟ್ ಚಿತ್ರಗಳಿಗೆ ಥಿಯೇಟರ್ ಸಮಸ್ಯೆ ಎದುರಾಗಿದೆ. ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾ ಎಲ್ಲ ಭಾಷೆ ಸೇರಿ 450ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಜೇಮ್ಸ್ ಇನ್ನೂ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಎರಡೂ ಸಿನಿಮಾಗಳ ಜತೆ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಕೂಡ ನೂರಾರು ಚಿತ್ರಮಂದಿರಗಳಲ್ಲಿದೆ. ಹೀಗಾಗಿ ಕನ್ನಡದ ಸಣ್ಣ ಬಜೆಟ್ ಚಿತ್ರಗಳು ಥಿಯೇಟರ್ ಕೊರತೆ ಎದುರಾಗಿದೆ. ಹಾಗಾಗಿ ಅನಿವಾರ್ಯವಾಗಿ ಆಯಾ ನಿರ್ಮಾಪಕರು ತಮ್ಮ ತಮ್ಮ ಚಿತ್ರಗಳ ರಿಲೀಸ್ ಅನ್ನು ಮುಂದೂಡುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ‘ಹರೀಶ್ ವಯಸ್ಸು 36’ ಸಿನಿಮಾ ರಿಲೀಸ್ ಆಗಬೇಕಿತ್ತು. ಎರಡು ವಾರಗಳಿಂದ ಈ ಸಿನಿಮಾವನ್ನೂ ಮುಂದೂಡುತ್ತಲೇ ಬಂದಿದೆ ಚಿತ್ರತಂಡ. ಆದರೂ, ಅವರಿಗೆ ಇನ್ನೂ ಥಿಯೇಟರ್ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗೆಯೇ ಮುಂದು ಹಾಕುತ್ತಾ ಹೋದರೆ, ಇನ್ನೂ ಸಂಕಷ್ಟಕ್ಕೆ ಸಿಲುಕಿಕೊಳ್ಳಬಹುದು ಎನ್ನುವ ಕಾರಣಕ್ಕಾಗಿ ಏಪ್ರಿಲ್ 8 ರಂದು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಹೊಸಬರ ‘ತ್ರಿಕೋನ’ ಸಿನಿಮಾ ಕೂಡ ಏಪ್ರಿಲ್ 1 ರಂದು ರಿಲೀಸ್ ಆಗಬೇಕಿತ್ತು. ಈ ಚಿತ್ರಕ್ಕೂ ಚಿತ್ರಮಂದಿರಗಳು ಸಿಕ್ಕಿಲ್ಲ. ಹಾಗಾಗಿ ಏಪ್ರಿಲ್ 8ರಂದು ಈ ಚಿತ್ರವನ್ನು ಬಿಡುಗಡೆ ಮಾಡಲು ಹೊರಟಿದೆ ಚಿತ್ರತಂಡ. ಈ ಕುರಿತು ಮಾತನಾಡಿರುವ ನಿರ್ದೇಶಕ ಚಂದ್ರಕಾಂತ್ ‘ಏಪ್ರಿಲ್ ಮೊದಲ ವಾರದಲ್ಲಿ 7 ಚಿತ್ರಗಳು ಬಿಡುಗಡೆ ಆಗುತ್ತಿವೆ. ಹಾಗಾಗಿ ನಮ್ಮ ಚಿತ್ರವನ್ನು ಏಪ್ರಿಲ್ 8ಕ್ಕೆ ಬಿಡುಗಡೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಅಲ್ಲದೇ, ಈ ವಾರ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ನಟನೆಯ ಕೊನೆಯ ಸಿನಿಮಾ ‘ತಲೆದಂಡ’ ಕೂಡ ಬಿಡುಗಡೆ ಆಗುತ್ತಿದೆ. ಇದಕ್ಕೂ ಥಿಯೇಟರ್ ಸಮಸ್ಯೆ ಎದುರಾಗಿದೆ. ಇದು ವಿಜಯ್ ನಟನೆಯ ಕೊನೆಯ ಸಿನಿಮಾವಾಗಿದ್ದರಿಂದ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕೊಡಿ ಎನ್ನುವುದು ನಿರ್ದೇಶಕರ ಬೇಡಿಕೆ. ಆದರೆ, ಈಗ ಚಿತ್ರಮಂದಿರದಲ್ಲಿರುವ ಅಷ್ಟೂ ಸಿನಿಮಾಗಳು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಾಗಾಗಿ ಅವುಗಳ ಬದಲು ಹೊಸ ಸಿನಿಮಾ ಹಾಕುವುದು ಕಷ್ಟವಾಗಲಿದೆ.
Comments
Post a Comment