ಜನರಿಗೆ ನೀವು ನೀರು ಕೊಡದಿದ್ದರೆ ಕಟ್ಟಿ ಹಾಕಿ ಹೊಡೆಯುತ್ತೇನೆ: ಅನಿಲ್ ಬೆನಕೆ
ಜನರಿಗೆ ನೀವು ನೀರು ಕೊಡದಿದ್ದರೆ ಕಟ್ಟಿ ಹಾಕಿ ಹೊಡೆಯುತ್ತೇನೆ: ಅನಿಲ್ ಬೆನಕೆ

ಬೆಳಗಾವಿ: ಜನರಿಗೆ ನೀವು ನೀರು ಕೊಡದಿದ್ದರೆ ಕಟ್ಟಿ ಹಾಕಿ ಹೊಡೆಯುತ್ತೇನೆ ಎಂದು ಎಲ್ ಟಿ ಕಂಪನಿಯ ಅಧಿಕಾರಿಗಳಿಗೆ ಬಿಜೆಪಿ ಶಾಸಕ ಅನಿಲ್ ಬೆನಕೆ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ ಮಹಾನಗರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಬೆಳಗಾವಿ ನಗರದ ಅನೇಕ ಬಡಾವಣೆಗಳಲ್ಲಿ ಕಳೆದ 10 ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ನಗರದಲ್ಲಿ ಕುಡಿಯುವ ನೀರು ಸಿಗದೇ ಜನ ಕಷ್ಟಪಡುತ್ತಿದ್ದಾರೆ.
ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಮಾಡುತ್ತಿರುವ ಎಲ್ ಟಿ ಕಂಪನಿ ಮತ್ತು ಪಾಲಿಕೆ ಸಿಬ್ಬಂದಿ ಜೊತೆಗೆ ಶಾಸಕ ಅನಿಲ್ ಬೆನಕೆ ಸಭೆ ನಡೆಸಿದರು. ಸಭೆಯಲ್ಲಿ ಎಲ್ ಟಿ ಕಂಪನಿಯ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿಮ್ಮ ತಪ್ಪು ಮುಚ್ಚಿ ಹಾಕಿಕೊಳ್ಳಲು ನೀವು ಕಾರಣ ಹೇಳಬೇಡಿ. ಜನರಿಗೆ ನೀವು ನೀರು ಕೊಡದಿದ್ದರೆ ಕಟ್ಟಿ ಹಾಕಿ ಹೊಡೆಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಒಂದು ವಾರದೊಳಗೆ ಸಮಸ್ಯೆ ಬಗೆ ಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಕಸಕೊಪ್ಪ, ಹಾಗೂ ಹಿಡಕಲ್ ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ ಜನರಿಗೆ ಮಾತ್ರ ಕುಡಿಯುವ ನೀರು ಸಿಗುತ್ತಿಲ್ಲ. ಹೀಗಾಗಿ ನಗರದ ಹಲವು ಬಡಾವಣೆಗಳಿಗೆ ಮಹಾನಗರ ಪಾಲಿಕೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದರು. ನೀರಿನ ಟ್ಯಾಂಕರ್ ಬರುತ್ತಿದ್ದಂತೆ ಜನರು ತಳ್ಳಾಡಿಕೊಂಡು ನೀರಿಗಾಗಿ ಪರದಾಡುತ್ತಿದ್ದಾರೆ.
Comments
Post a Comment